ಗಜಮುಖ ನಾ ನಿನ್ನ ಪಾದವ ನೆನವೆ,
ಪ್ರತಿಯಾಗಿ ಕರುಣಿಸು ವರಗಳ ಪ್ರಭುವೇ.....
ಆ ಹಾಡಿಗೆ ಮನ ಸೋತು ಹೋಯಿತು. ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದವನು ನಿದ್ದೆಲೂ ಇದೇ ಹಾಡು. ಎಚ್ಚರ ಆದಮೆಲೆ ನೋಡ್ತಿನೀ, ಎಲ್ಲರೂ ನನ್ನನ್ನ ನೋಡಿ ನಗ್ತಾ ಇದಾರೆ. ಏನಾಯ್ತಪ್ಪ ಅಂತ ಮೊದಲು ಚಡ್ಡಿ ಕಡೆ ನೋಡ್ಕೊಂಡೆ. ಒದ್ದೆ ಆಗಿಲ್ಲ. ಮತ್ತೇನು ಅಂತ ಕಣ್ಣು ಬಾಯಿ ಬಿಟ್ಕೊಂಡು ಅಮ್ಮನ ಮುಖ ನೋಡಿದೆ. ಅವಳು ನಗ್ತಾ ಇದ್ದಳು. (ನಮ್ಮ ಕಡೆ ಎಲ್ಲ ಅಮ್ಮಂಗೆ ನೀನು ಅಂತಾನೆ ಕರೆಯೋದು. ಮಹಿಳ ಮೀಸಲಾತಿ ಬಗ್ಗೆ ದನಿ ಎತ್ತಬೇಡಿ ಮಾರಾಯ್ರೆ, ನಮಗೆ ಸ್ವಲ್ಪ ಅಮ್ಮನ ಮೇಲೆ ಪ್ರೀತಿ ಜಾಸ್ತಿ ಅಷ್ಟೆ.). ನನ್ನ ಸ್ಥಿತಿ ನೋಡಿ ಅವಳಿಗೆ ಪಾಪ ಅನ್ನಿಸ್ತೋ ವಿಷಯ ಹೇಳೋ ಕ್ರುಪೆ ತೋರಿದ್ಲು. ಎಂತದೋ ಮಾರಾಯಾ ಮಲಗಿದವನಿಗೆ ಏನಾಯ್ತು? ಕಾಳಿಂಗ ನಾವಡ ಮೈಮೇಲೆ ಬಂದಿದ್ನಾ ಅಂದ್ಲು. (ಆಗಿನ್ನೂ ಎಲ್ಲರು ಮಾತಾಡ್ಕೊಳ್ತಿದ್ದ ಕಾಲ - "ಲೋ ಸೂರು ಕೇಳಿದ್ಯೇನೊ ನಾವಡ ಹೋದ್ನಂತೆ ಮಾರಾಯ" ಅಂತ ಅಪ್ಪ ಹೇಳಿದ್ದನ್ನ ಕೇಳಿದ್ದೆ. ಆದರೆ ಅವರ್ಯಾರು ಅಂತ ಗೊತ್ತಿರಲಿಲ್ಲ.) ಅಮ್ಮ ಮತ್ತೆ ಬಿಡಿಸಿ ಹೇಳಿದ್ಲು. ನಿದ್ದೇಲೂ ಭಾಗವತಿಗೆ ಮಾಡ್ತಿದ್ಯಲ್ಲೋ ಮಗನೇ ಯಕ್ಷಗಾನ ಪೂರ್ತಿ ನೋಡಿದ್ಯಾ ಅಂದ್ಲು. ಹ್ನೂಂ ಅಂದೆ. ಆಮೇಲೆ ಒಂದೆರಡು ತಿಂಗಳು ಕೂತಲ್ಲಿ ನಿಂತಲ್ಲಿ ಇದೇ ಹಾಡು. ಅಪ್ಪನ ಕೈಲಿ ಬೈಸಿಕೊಂಡಿದ್ದು ಆಯಿತು. ಆದ್ರೆ ಇವತ್ತಿಗು ನಾವಡ ಮೈಮೇಲೆ ಬರೋದು ಮಾತ್ರ ನಿಲ್ಲಲಿಲ್ಲ.
ಇದೆಲ್ಲ ನಡೆದಿದ್ದು ನಾನು ಮೂರನೇ ಕ್ಲಾಸ್ ನಲ್ಲಿದ್ದಾಗ. ಅಪ್ಪ ಒಂದಿನ ಬೆಳಿಗ್ಗೆ ಅಮ್ಮನ ಹತ್ರ ಹೇಳ್ತಾ ಇದ್ದರು. ನಾನು ಅಲ್ಲೆ ಒಲೆ ಬುಡದಲ್ಲಿ ಚಳಿ ಕಾಯಿಸ್ತಾ ಕೂತಿದ್ದೆ. "ಯೆ ಇವತ್ತು ಸಂಜೆ ಯಕ್ಷಗಾನ ಇದ್ಯಲೇ? ಹೋಗೋಣ ರಾತ್ರಿ ಅಡುಗೆ ಬೇಗ ಮಾಡು" ಅಮ್ಮಂಗೆ ಅಂತಾ ಏನು ಆಸಕ್ತಿ ಇದ್ದ ಹಾಗೆ ಕಾಣ್ಲಿಲ್ಲ. ಚಿಟ್ಟಾಣಿ ಬರ್ತಿದಾನಂತೆ, ಸ್ವಲ್ಪ ಹೊತ್ತು ನೋಡಿ ಬರೋಣ. ಮಕ್ಕಳಿಗೂ ಒಂದು ಹೊಸತು ಅಂತ ಒತ್ತಿ ಹೇಳಿದ ಮೇಲೆ ಅಮ್ಮ ಒಪ್ಪಲೇಬೇಕಾಯಿತು. ನಂಗೆ ಅವತ್ತಿಡಿ ಏನೋ ಖುಶಿ. ಸಂಜೆ ಆಗುವುದಕ್ಕೇ ಕಾಯ್ತಾ ಇದ್ದ ನಾನು ಕ್ಲಾಸ್ ಮುಗಿಸಿ ನಲವತ್ತೇ ನಿಮಿಷಕ್ಕೆ ಮನೆ ಸೇರಿದ್ದೆ. ನಲವತ್ತೇ ನಿಮಿಷ ಯಾಕೆ ಅಂತಾನ? ಸ್ವಾಮಿ ನಾನು ಇರೋದು ಮಲೆನಾಡಿನ ಒಂದು ಹಳ್ಳಿ ಮೂಲೇಲಿ. ದಿನಾ ಕಿಲೋಮೀಟರ್ ಗಟ್ಟಲೆ ನಡೆದು ಶಾಲೆ ಸೇರಬೇಕಿತ್ತು. ನಮ್ಮೂರನಲ್ಲಿ ಒಂದು ವಿಶೇಷ ಅಂದ್ರೆ ಇಡೀ ಊರಿಗೆ ಒಂದೇ ಮನೆ. "ಅದೂ ಒಂದು ಊರ?" ಅಂತ ಯಾರಾದ್ರು ಕೇಳಿದ್ರೆ ಏನನ್ನಬೇಕು ಅಂತ ನಂಗೂ ಗೊತಾಗೋಲ್ಲ.
ಮನೆಗೆ ಬರ್ತಿದ್ದ ಹಾಗೆ ಅಮ್ಮನ ಹತ್ರ ಅಕ್ಕಂದಿರ ಕಂಪ್ಲೆಂಟ್.
"ಅಮ್ಮ ಅವನು ಮುಂದೆ ಮುಂದೆ ಓಡ್ತಾ ಇದ್ದ ಕೈ ಹಿಡ್ಕೊಂಡ್ರು ನಮ್ಮನ್ನೇ ಎಳ್ಕೊಂಡು ಹೋಗ್ತಾ ಇದ್ದ."
"ಯಾಕೋ ಅವ್ರೊಟ್ಟಿಗೆ ಸುಮ್ನೆ ಬಂದ್ರೆ ಏನಾಗುತ್ತೊ ನಿಂಗೆ" ಅಂತ ಬೈದು ಕೆಲಸದಲ್ಲಿ ತೊಡಗಿದಳು.
ಅಮ್ಮನ ಹಿಂದೆ ಮುಂದೇನೆ ಸುತ್ತಿ ಅಂತೂ ರಾತ್ರಿ ಊಟನೂ ಅರೆ ಬರೆ ಮುಗ್ಸಿ ಹೊರಟಿದ್ದಾಯ್ತು.
ದೇವಸ್ಥಾನದ ಬಯಲಿನಲ್ಲಿ ಆಟಕ್ಕೆ ಬೇಕಾದ ಎಲ್ಲ ಸಿದ್ದತೆ ಮಾಡಲಾಗಿತ್ತು.ಎಲ್ಲ ಮಾತಾಡ್ಕೊಳ್ತಾ ಇದ್ರು "ಪ್ರಸಂಗ ಶನಿ ಮಹಾತ್ಮೆ ಅಂತೆ, ಚಿಟ್ಟಾಣಿ ಬರ್ತಾರಂತೆ" ನಂಗೆ ಏನು ಅರ್ಥ ಆಗ್ತಾ ಇರ್ಲಿಲ್ಲ. ಅಷ್ಟರಲ್ಲಿ ರಂಗ ಮಂಟಪದ ತೆರೆ ಸರಿಸಲಾಯಿತು. ಅಪ್ಪ ನಂಗೆ ಎಲ್ಲ ವಿವರಿಸಿ ಹೇಳಿದ್ರು . ಅದು ಚಂಡೆ, ತಾಳಾ, ಅವರು ಭಾಗವತರು, ಈಗ ಪಾತ್ರದಾರಿಗಳು ಬರ್ತಾರೆ ಹೀಗೆ ಎಲ್ಲಾ.... ಮೊದಲ ಬಾರಿಗೇ ನನಗೆ ತುಂಬಾ ಖುಶಿ ಆಗಿತ್ತು. ಯಕ್ಷಗಾನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದೆ. ಚಿಟ್ಟಾಣಿ ಅವರ ನೃತ್ಯ, ಅವರ ಸಂಭಾಷಣೆ, ಪ್ರತಿಯೊಂದು ರಸಗಳನ್ನ ವ್ಯಕ್ತಪಡಿಸುವ ರೀತಿ ಅದ್ಭುತ, ಈಗಲೂ ಅದು ನೆನಪಾಗ್ತಿರುತ್ತೆ.
ರಂಗ ನಾಯಕ ರಾಜೀವ ಲೋಚನ
ರಮಣ ನೀ ಬೆಳಗಾಯಿತೇಳೆನ್ನುತಾ.....
ತಾಂಗದಿನ್ನ ದಿನ್ನ ದೀಮ್
ಎಂದು ಮಂಗಳ ಹಾಡಿದ್ರೂ ನನಗೆ ಏಳೋಕೆ ಮನಸ್ಸೇ ಇರ್ಲಿಲ್ಲ. ಮಾರನೇ ದಿನ ನಮಗೆ ದೂರದಲ್ಲೆಲ್ಲೊ ಯಕ್ಶಗಾನ ನಡೀತಿದಿಯೇನೋ ಅಂತ ಅನ್ನುಸ್ತಿತ್ತು. ನಾನು ಮತ್ತೆ ನನ್ನ ಅಕ್ಕ ಇಬ್ರು ರಾತ್ರಿ ಯಕ್ಷಗಾನ ನಡಿತಾ ಇದ್ದ ಜಾಗಕ್ಕೆ ಮತ್ತೊಂದ್ಸರಿ ಹೋಗಿ ನೋಡ್ಕೊಂಡು ಬಂದಿದ್ವಿ...
ಚೆನ್ನಾಗಿ ಮೂಡಿಬಂದಿದೆ.. ನಿನ್ನದೇ ಈ ಶೈಲಿಯಲಿ ನಿನ್ನ ಜೀವನದ ಇನ್ನಷ್ಟು ಅನುಭವಗಳು ಮೂಡಿ ಬರಲಿ..
ಪ್ರತ್ಯುತ್ತರಅಳಿಸಿನ. ಗೋ. ಪ್ರ.